ಪೊಲೀಸರ ಮೇಲೆ ಹಲ್ಲೆಗೈದು ಪರಾರಿಗೆ ಯತ್ನಿಸಿದ ಕೊಲೆ ಆರೋಪಿ ಮೇಲೆ ಫೈರಿಂಗ್ | ಜನತಾ ನ್ಯೂಸ್
ಬೆಂಗಳೂರು : ರೌಡಿ ಪತ್ನಿ ಜೊತೆ ಮತ್ತೋರ್ವ ರೌಡಿಶೀಟರ್ ಅಕ್ರಮ ಸಂಬಂಧ ಹೊಂದಿದ್ದ ಶಂಕೆಯ ಮೇರೆಗೆ ಆತನನ್ನು ಮಾರಕಾಸ್ತ್ರಗಳಿಂದ ಕೊಲೆಗೈದು ತಲೆಮರೆಸಿಕೊಂಡಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿ ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮೊಹಮ್ಮದ್ ಸಲೀಂ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ. ಬಂಧಿಸಲು ಹೋದ ಗೋವಿಂದಪುರ ಪೊಲೀಸರ ಮೇಲೆಯೇ ಆರೋಪಿ ದಾಳಿ ಮಾಡಲು ಮುಂದಾಗಿದ್ದಾನೆ.
ಈ ವೇಳೆ ಗೋವಿಂದಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆತ್ಮರಕ್ಷಣೆಗಾಗಿ ಫೈರಿಂಗ್ ನಡೆಸಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಳೆದ ಮೂರು ದಿನಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಿಗಾಗಿ ತಲಾಶ್ ನಡೆಸುತ್ತಿದ್ದರು. ಗೋವಿಂದಪುರ ಬಳಿ ಆರೋಪಿ ಮೊಹಮ್ಮದ್ ಸಲೀಂ ಅಡಗಿಕೊಂಡಿರುವುದನ್ನರಿತ ಪಿಎಸ್ಐ ಇಮ್ರಾನ್ ನೇತೃತ್ವದ ತಂಡ, ಸ್ಥಳಕ್ಕೆ ತೆರಳಿ ಬಂಧಿಸಿಲು ಯತ್ನಿಸಿದ ವೇಳೆ ಸಲೀಂ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಜೀವ ರಕ್ಷಣೆಗಾಗಿ ಪಿಎಸ್ಐ ಗಾಳಿಯಲ್ಲಿ ಗುಂಡು ಹಾರಿಸಿ, ನಂತರ ಆರೋಪಿ ಕಾಲಿಗೆ ಫೈರಿಂಗ್ ಮಾಡಿದ್ದಾರೆ.
ಜೈಲುನಲಿದ್ದ ರೌಡಿಶೀಟರ್ ಅನೀಸ್ ಅಹಮದ್ ಪತ್ನಿ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಆರೋಪದಡಿ ಜೂ. 22ರಂದು ಮತ್ತೋರ್ವ ರೌಡಿಶೀಟರ್ ಸೈಯದ್ ಕರೀಂನನ್ನು ಮೊಹಮ್ಮದ್ ಸಲೀಂ ಹಾಗೂ ಆತನ ಸಹಚರರು ಗೋವಿಂದಪುರ ಬಳಿಯ ನಿರ್ಜನ ಪ್ರದೇಶ ಬಳಿ ಹತ್ಯೆಗೈದಿದ್ದರು.